ತುರ್ತುಪರಿಸ್ಥಿತಿಗೆ ವಿರೋಧ: ಸಾಮಾಜಿಕ ಚಟುವಟಿಕೆಯ ಮೊದಲ ಹೆಜ್ಜೆ
ಅವರಿಗಿನ್ನೂ ಹದಿನಾರರ ಹರೆಯ. ತುಂಬಿ ತುಳುಕುತ್ತಿದ್ದ ದಿಟ್ಟತೆ; ಕ್ರಿಯಾಶೀಲತೆ. ಪ್ರಜಾತಂತ್ರದ ನೇಯ್ಗೆಯನ್ನೇ ಛಿದ್ರಗೊಳಿಸುತ್ತಿದ್ದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಲು ಲೋಕನಾಯಕ ಜಯಪ್ರಕಾಶ ನಾರಾಯಣ್ ಕರೆ ನೀಡಿದ್ದರು. ಇಡೀ ದೇಶದಲ್ಲಿ ಪ್ರತಿಭಟನೆಯ ದಟ್ಟ ಛಾಯೆ. ಜೆಪಿ ಕರೆಗೆ ಓಗೊಟ್ಟ ಪರಿಣಾಮವೇ ಅನಂತಕುಮಾರ್ ಬಂಧನವಾಯಿತು; ಮೂವತ್ತು ದಿನ ಸೆರೆವಾಸ. ಈ ಘಟನೆ ಅವರ ಎದೆಯಾಳದ ದಿಟ್ಟತೆಯನ್ನು ಮತ್ತಷ್ಟು ಗಟ್ಟಿ ಮಾಡಿತು. ರಾಷ್ಟ್ರೀಯ ಪುನರುತ್ಥಾನದ ಗುರಿಯ ಗರಿ ಮತ್ತೆ ಕೆದರಿತು. ವಿದ್ಯಾರ್ಥಿ ಸಮುದಾಯದ ಧ್ವನಿಯಾಗಿ ಅನಂತಕುಮಾರ್ ಶಿಕ್ಷಣ ಸಂಸ್ಥೆಗಳ ಮೊಗಸಾಲೆಯಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸಿದರು.
೧೯೭೭ರಿಂದ ೧೯೮೭ರವರೆಗೆ ಅನಂತಕುಮಾರ್ ಬದುಕಿನ ಪುಟಗಳು ಸಾಮಾಜಿಕ ಕಾರ್ಯದ ಕಲಿಕೆಯಲ್ಲೇ ಕಳೆಯಿತು. ಕಾಲೇಜು ಶಿಕ್ಷಣವೂ ಮುಂದುವರಿಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸಕ್ರಿಯ ಕಾರ್ಯಕರ್ತರಾಗಿ ಅನಂತಕುಮಾರ್ ಇಡೀ ರಾಜ್ಯದ ಉದ್ದಗಲಕ್ಕೂ ಸಂಚರಿಸಿದರು; ವಿದ್ಯಾರ್ಥಿಗಳ ಕನಸುಗಳನ್ನು ಅರಿತರು; ಅವರ ಕಷ್ಟಸುಖಗಳಲ್ಲಿ ಭಾಗಿಯಾದರು. ಅವರಿಗೆ ಬದುಕಿನಲ್ಲಿ ಸಾಧಿಸಬೇಕಾದ್ದೇನು ಎಂಬ ಸ್ಪಷ್ಟ ಒಳನೋಟ ಸಿಕ್ಕಿದ್ದು ಇಲ್ಲಿಯೇ. ಹುಬ್ಬಳ್ಳಿಯಲ್ಲಿ ಎಬಿವಿಪಿಯ ಸಾಮಾನ್ಯ ಸದಸ್ಯರಾಗಿದ್ದ ಅನಂತಕುಮಾರ್ ಮುಂದೆ ಸಂಘಟನೆಯ ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸಿದರು. ಅವರ ಕಠಿಣ ಪರಿಶ್ರಮ, ನಿರಂತರ ಸೇವಾಮನೋಭಾವವೇ ಈ ಬೆಳವಣಿಗೆಗೆ ಕಾರಣ.
- ವಿಶ್ವವಿದ್ಯಾಲಯದ ಮಟ್ಟದಲ್ಲಿ ಕ್ಯಾಂಪಸ್ ಉಳಿಸಿ ಆಂದೋಳನದ ನಾಯಕತ್ವ ವಹಿಸಿದರು.
- ಅಸ್ಸಾ೦ ರಕ್ಷಿಸಿ ಆಂದೋಲನದ ರಾಜ್ಯ ಸಂಯೋಜಕರಾದರು.
- ರಾಷ್ಟ್ರೀಯ ಸ್ವಯಂಸೇವಕ ಸಂಘದ ಬರ ಪರಿಹಾರ ಸಮಿತಿಯ ರಾಜ್ಯ ಸಂಚಾಲಕರಾದರು.
- ೧೯೮೫ರಲ್ಲಿ ಅಂತಾರಾಷ್ಟ್ರೀಯ ಯುವ ವರ್ಷದ ಸಂದರ್ಭದ ವಿದ್ಯಾರ್ಥಿ ಯುವ ಸಮಿತಿಯ ರಾಜ್ಯ ಸಂಚಾಲಕರಾದರು.
- ಎ ಬಿ ವಿ ಪಿ ಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದರು.
- ಎ ಬಿ ವಿ ಪಿ ಯ ರಾಜ್ಯ ಕಾರ್ಯದರ್ಶಿಯಾದರು.
- ಎ ಬಿ ವಿ ಪಿ ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು.




